ಕೋಟ ವಿವೇಕದ 246 ವಿಶಿಷ್ಟ ಶ್ರೇಣಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಕೋಟ : ವಿವೇಕ ಪದವಿಪೂರ್ವ ಕಾಲೇಜಿನ 2016-17ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಶೇಷ ಸಾಧನೆಗೈದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿಜ್ಞಾನ ವಿಭಾಗದ 150, ವಾಣಿಜ್ಯ ವಿಭಾಗದ 94 ಹಾಗೂ ಕಲಾ ವಿಭಾಗದ ಇಬ್ಬರು ಸೇರಿದಂತೆ ಒಟ್ಟು 246 ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕರಿಸಲಾಯಿತು.ಈ ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀ ಪಿ. ಪ್ರಭಾಕರ ಮೈಯ್ಯರು ಸಮಾರಂಭದ ಅಧ್ಯಕ್ಷತೆ ವಹಿಸಿ ‘ವಿದ್ಯಾರ್ಥಿಗಳು ನಿರಂತರ ಅಧ್ಯಯನ ಪ್ರವೃತ್ತರಾಗಿ ಏಕಾಗ್ರತೆ, ಶಿಸ್ತು, ಕರ್ತವ್ಯ ಬದ್ಧತೆಯನ್ನು ಬೆಳೆಸಿಕೊಳ್ಳಬೇಕು. ಇತ್ತೀಚಿನ ಬಾಹ್ಯ ಆಕರ್ಷಣೆ ಒಳಗಾಗದೆ ಸ್ಥಿರ ಚಿತ್ತರಾಗಿ ಅಧ್ಯಯನ ಮಾಡಿ ಯಶಸ್ವಿಯಾಗಿ ಸಮಾಜಮುಖಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು’ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ಪಿ. ಸುಬ್ರಹ್ಮಣ್ಯ ಉಪಾಧ್ಯರು ‘ವಿದ್ಯಾರ್ಥಿಗಳು ಕೇವಲ ವಿಜ್ಞಾನ ವಿಷಯವನ್ನು ತೆಗೆದುಕೊಂಡರೆ ಮಾತ್ರ ಮುಂದೆ ಉದ್ಯೋಗ ಪ್ರಾಪ್ತಿ ಎಂಬ ತಪ್ಪು ಕಲ್ಪನೆ ಕೆಲವರಲ್ಲಿದೆ. ವಾಣಿಜ್ಯ ಮತ್ತು ಕಲಾ ವಿಷಯಗಳನ್ನು ಚೆನ್ನಾಗಿ ಅಧ್ಯಯನ ಮಾಡಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿದರೆ ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಲು ಸಾಧ್ಯ’ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಶ್ರೀ ಕೆ. ಜಗದೀಶ ನಾವಡರು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಪ್ರೌಢಶಾಲಾ ವಿಭಾಗದ ಮುಖ್ಯಸ್ಥರಾದ ಶ್ರೀ ಕೆ. ಜಗದೀಶ ಹೊಳ್ಳ, ಶ್ರೀ ಶ್ರೀಪತಿ ಹೇರ್ಳೆ ಹಾಗು ಬಾಲಕರ ಪ್ರೌಢಶಾಲಾ ವಿಭಾಗದ ಹಿರಿಯ ಶಿಕ್ಷಕರಾದ ಶ್ರೀ ವೆಂಕಟೇಶ ಉಡುಪರು ಉಪಸ್ಥಿತರಿದ್ದರು.
ಕೋಟ ವಿದ್ಯಾಸಂಘದ ಕೋಶಾಧಿಕಾರಿ ಶ್ರೀ ವಲೇರಿಯನ್ ಮೆನೇಜಸ್, ಸದಸ್ಯರಾದ ಶ್ರೀ ಪಿ. ಶ್ರೀಧರ ಉಪಾಧ್ಯ, ಶ್ರೀ ಭಾಸ್ಕರ ಹಂದೆಯವರು ಉಪಸ್ಥಿತರಿದ್ದು ವಿದ್ಯಾರ್ಥಿಗಳ ಮುಂದಿನ ಜೀವನಕ್ಕೆ ಶುಭ ಹಾರೈಸಿದರು.
ವಿಜ್ಞಾನ ವಿಭಾಗದಲ್ಲಿ 591 ಅಂಕ ಗಳಿಸಿ ರಾಜ್ಯದಲ್ಲಿ 6ನೆಯ ಸ್ಥಾನ ಪಡೆದ ಕುಮಾರಿ ಅನುಷಾ ಬಿ ಪೈ ಇವಳನ್ನು ವಿಶೇಷವಾಗಿ ಸಂಮ್ಮಾನಿಸಲಾಯಿತು.
ಸನ್ಮಾನಿತರ ಪರವಾಗಿ ವಿಜ್ಞಾನ ವಿಭಾಗದ ಸುದರ್ಶನ ಹೊಳ್ಳ, ಶ್ರೀ ಲಕ್ಷ್ಮಿ ಉಪಾಧ್ಯ ಹಾಗು ವಾಣಿಜ್ಯ ವಿಭಾಗದ ವಿನೀತ್ ಪೈ, ಸುಷ್ಮಾ ತಮ್ಮ ಅನಿಸಿಕೆಯನ್ನು ವ್ಯಕ್ತ ಪಡಿಸಿದರು.
ಉಪನ್ಯಾಸಕರಾದ ಶ್ರೀ ಶ್ರೀಕಾಂತ ಚಡಗ, ಶ್ರೀಮತಿ ರೇಖಾ ಸಾಯಿ, ಶ್ರೀ ಅಶೋಕ್ ಕುಮಾರ್ ಶೆಟ್ಟಿ, ಶ್ರೀಮತಿ ಶೋಭಾ ಅವಭೃತ ಇವರು ವಿಶಿಷ್ಟ ಸಾಧಕರ ಪಟ್ಟಿಯನ್ನು ವಾಚಿಸಿದರು.
ಕಾರ್ಯಕ್ರಮದ ನಿರ್ವಹಣೆಯನ್ನು ಶ್ರೀ ಸುಬ್ರಹ್ಮಣ್ಯ ಭಟ್ ಹಾಗೂ ಶ್ರೀ ಚಂದ್ರಶೇಖರ್ ಎಚ್.ಎಸ್. ಇವರು ನೆರವೇರಿಸಿದರು. ಶ್ರೀ ರವಿ ಕಾರಂತ ಹಾಗು ಶ್ರೀಮತಿ ಜಯಶ್ರೀ ಇವರು ಧನ್ಯವಾದ ಸಮರ್ಪಣೆಗೈದರು.