ಆಧುನಿಕ ತಂತ್ರಜ್ಞಾನದೊಂದಿಗೆ ಕೃಷಿಯನ್ನು ಪ್ರೀತಿಸಿದರೆ ಮಾತ್ರ ಕೃಷಿ ಲಾಭದಾಯಕ: ಶ್ರೀ ವೈಕುಂಠ ಹೇರ್ಳೆ
ವಿವೇಕ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ಕೃಷಿಕ ಸಂಘದ ವತಿಯಿಂದ ನಡೆದ “ ಲಾಭದಾಯಕ ಕೃಷಿ” ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಶ್ರೀ ವೈಕುಂಠ ಹೇರ್ಳೆಯವರು ಇಂದಿಗೂ ಕೃಷಿ ಲಾಭದಾಯಕವಾಗಿದೆ. ಆದರೆ ಹೊಸ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು. ತೆಂಗಿನ ಮರಗಳ ನಡುವೆ ಇಟ್ಟಿಗೆ ಕಂಬವನ್ನು ಮಾಡಿ ಕಾಳು ಮೆಣಸನ್ನು ಬೆಳಸಬಹುದು, ಅನಾನಸು, ಪಪಾಯಿ, ಕೋಕೋ, ಜಾಯಿಕಾಯಿ, ನುಗ್ಗೆಯನ್ನು ಬೆಳಸಿ ಕೃಷಿಯಲ್ಲಿ ಹೆಚ್ಚು ಲಾಭಪಡೆಯಬಹುದು. ಇಂದು ಅನೇಕ ಸ್ವಾಪ್ಟ್ವೇರ್ ಕೆಲಸದಲ್ಲಿದ್ದ ಯುವಕರು ಕೃಷಿಯತ್ತ ಒಲವು ತೋರುತ್ತಿದ್ದಾರೆ. ಕೃಷಿಯು ಮಾನಸಿಕ ನೆಮ್ಮದಿಯೊಂದಿಗೆ ಲಾಭವನ್ನೂ ನೀಡುತ್ತದೆ. ಆದುದರಿಂದ ಕೃಷಿಯನ್ನು ನಿರ್ಲಕ್ಷಿಸಬೇಡಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಇನ್ನೋರ್ವ ಪ್ರಗತಿಪರ ಕೃಷಿಕರಾದ ಮಣೂರಿನ ಶ್ರೀಶಿವಾನಂದ ಅಡಿಗರು 5 ಸೆಂಟ್ಸ್ ಜಾಗವಿದ್ದಲ್ಲಿ ವರ್ಷಕ್ಕೆ ತರಕಾರಿಯಿಂದ ಕನಿಷ್ಠ 18,000 ರೂ ಲಾಭವನ್ನು ಪಡೆಯಬಹುದು. ಇದಕ್ಕಾಗಿ ನೀವು ಕೇವಲ 1 ಗಂಟೆ ಮಾತ್ರ ಕೃಷಿಯ ಕಡೆಗೆ ಗಮನ ಕೊಟ್ಟರೆ ಸಾಕು. ಕೃಷಿಯಲ್ಲಿ ಸಿಗುವ ನೆಮ್ಮದಿ, ಸಮಯ ಸಾಪ್ಟ್ವೇರ್ ಕಂಪನಿಯಲ್ಲಿರುವ ಉದ್ಯೋಗಿಗಳಿಗೆ ಸಿಗುವುದಿಲ್ಲ. ಕೃಷಿಕರು ನಾವು ಕೃಷಿಕರು ಎಂದು ಹೇಳಲು ನಾಚಿಕೆ ಪಡುತ್ತಿರುವುದರಿಂದ ಇಂದು ಹೆಚ್ಚಿನವರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಕೃಷಿಯು ಒಂದು ದೈಹಿಕ ಮತ್ತು ಮಾನಸಿಕ ನೆಮ್ಮದಿ ಕೊಡುವ ಉದ್ಯೋಗ ಎಂದು ಪರಿಗಣಿಸಿದರೆ ಮಾತ್ರ ಕೃಷಿಯಿಂದ ವಿಮುಖರಾಗುವುದು ತಪ್ಪುತ್ತದೆ. ಬೇರೆ ಉದ್ಯೋಗದಲ್ಲಿ ಪೈಪೆÇೀಟಿ ಇರುತ್ತದೆ. ಆದರೆ ಕೃಷಿಯಲ್ಲಲ್ಲ. ಇದರಿಂದ ಮಾನಸಿಕ ನೆಮ್ಮದಿ ಹಾಳಾಗುತ್ತದೆ. ಆದರೆ ಕೃಷಿಯಲ್ಲಿ ಪರಸ್ಪರ ಸಹಕಾರವಿರುವುದರಿಂದ ಕೃಷಿಕರು ಆರೋಗ್ಯವಂತರಾಗಿರುತ್ತಾರೆ. ನೀವು ಕೃಷಿಯಿಂದ ವಿಮುಖರಾಗಬೇಡಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಪ್ರಾಂಶುಪಾಲ ಶ್ರೀ ಜಗದೀಶ ನಾವಡ ಪ್ರಾಸ್ತವಿಕ ಮಾತಿನೊಂದಿಗೆ ಎಲ್ಲರನ್ನು ಸ್ವಾಗತಿಸಿದರು. ವಿದ್ಯಾರ್ಥಿ ಕೃಷಿಕ ಸಂಘದ ಕಾರ್ಯದರ್ಶಿ ಕುಮಾರ ಚರಣರಾಜ ವೇದಿಕೆಯಲ್ಲಿ ಉಪಸ್ಥಿರಿದ್ದರು, ಹಿರಿಯ ಸಹಾಯಕ ಶಿಕ್ಷಕ ಶ್ರೀ ವೆಂಕಟೇಶ ಉಡುಪ ಧನ್ಯವಾದಗೈದರು, ಪ್ರಣಾಮ, ಅಶ್ವಿನ್ ಮತ್ತು ಶ್ರೀಶ ಪ್ರಾರ್ಥನೆಗೈದರು. ಕುಮಾರ ಚಂದ್ರಶೇಖರ ಕಾರ್ಯಕ್ರಮವನ್ನು ನಿರೂಪಿದರು.