ವಿವೇಕ ವಿದ್ಯಾಸಂಸ್ಥೆಗಳಲ್ಲಿ 71ನೇ ಸ್ವತಂತ್ರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ವಿವೇಕ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ. ಜಗದೀಶ ನಾವಡರು ಧ್ವಜಾರೋಹಣಗೈದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ‘ಇಂದು ನಾವು 71ನೇ ಸ್ವತಂತ್ರ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ದೇಶದ ಸ್ವತಂತ್ರಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು, ದೇಶದ ರಕ್ಷಣೆಗೋಸ್ಕರ ಪ್ರಾಣ ತ್ಯಾಗ ಮಾಡಿ ಬಲಿದಾನ ಮಾಡಿದ ಅನೇಕ ನಾಯಕರನ್ನು ನಾವು ಸ್ಮರಿಸಿಕೊಳ್ಳಬೇಕು. ಅವರ ತ್ಯಾಗ ಮತ್ತು ಸೇವೆ ಅವಿಸ್ಮರಣೀಯ ಹಾಗು ಅಪೂರ್ವವಾಗಿದೆ. ನಿಜವಾದ ದೇಶಭಕ್ತಿಯಿಂದ, ಅಭಿಮಾನದಿಂದ ಹೋರಾಡಿ ನಮಗೆ ಸ್ವತಂತ್ರವನ್ನು ಒದಗಿಸಿಕೊಟ್ಟಿದ್ದಾರೆ. ಆದ್ದರಿಂದ ನಾವು ಉಳಿಸಿ-ಬೆಳೆಸಿಕೊಂಡು ಹೋಗಬೇಕಾದ ಜವಾಬ್ದಾರಿ ನಮ್ಮ ಮೇಲಿದೆ’ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ‘ನವ್ಯ ಭಾರತ ನಿರ್ಮಾಣ’ ಸಂಕಲ್ಪವನ್ನು ವಿದ್ಯಾರ್ಥಿಗಳಿಗೆ ಓದಿ, ಮಾಹಿತಿ ವಿವರಿಸಿ ಎಲ್ಲ ವಿದ್ಯಾರ್ಥಿಗಳಿಗೆ ಸಂಕಲ್ಪದೀಕ್ಷೆಯನ್ನು ನೀಡಿದರು.
ಹಾಗೆಯೇ ಕಾಲೇಜಿನ ಸಮಾಜಸೇವಾ ಸಂಘದ ವತಿಯಿಂದ ಗಿಡ ನೆಡುವಿಕೆ ಕಾರ್ಯಕ್ರಮವು ವಿದ್ಯಾಸಂಸ್ಥೆಗಳ ಆವರಣದಲ್ಲಿ ಜರುಗಿತು.
ಈ ಕಾರ್ಯಕ್ರಮದಲ್ಲಿ ಬಾಲಿಕಾ ಪ್ರೌಢಶಾಲೆಯ ಮುಖ್ಯೋಪಾಧ್ಯಯರಾದ ಶ್ರೀ ಕೆ. ಜಗದೀಶ ಹೊಳ್ಳ ಹಾಗು ವಿವೇಕ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಶ್ರೀಪತಿ ಹೇರ್ಳೆ, ಬಾಲಕರ ಪ್ರೌಢಶಾಲೆಯ ಹಿರಿಯ ಶಿಕ್ಷಕ ಶ್ರೀ ವೆಂಕಟೇಶ ಉಡುಪರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ಧ್ವಜಾರೋಹಣೆ ಹಾಗು ರಾಷ್ಟ್ರಗೀತೆಯೊಂದಿಗೆ ಸಂಪನ್ನಗೊಂಡಿತು.